ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕೃಷಿ ಪ್ರಿಯ (ವೆಬ್ ಪೋರ್ಟಲ್) ಪತ್ರಿಕೆ ಜರ್ಮನ್ ದೇಶದಲ್ಲಿ ವಾಸಿಸಿರುವ ಕನ್ನಡಿಗರ ಮನೆಮಾತಾಗಿದೆ ಎಂದು ಹಿರಿಯ ಪತ್ರಕರ್ತ ಮುಖೇಶ್ ನಿಲೋಗಲ್ ಅಭಿಪ್ರಾಯವ್ಯಕ್ತಪಡಿಸಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಗುತ್ತಿಗೆದಾರ ರೇಹಮಾನಸಾಬ ದೊಡ್ಡಮನಿ ಅವರ ಮಾವಿನ ತೋಟದಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಪತ್ರಿಕೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಪ್ರಿಯ ಪತ್ರಿಕೆ ಕೇವಲ ಕೊಪ್ಪಳ ಜಿಲ್ಲೆಗೆ ಸೀಮಿತವಾಗಿರದೆ, ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ತನ್ನದೇ ಆದ ಓದುಗ ದೊರೆಗಳನ್ನು ಹೊಂದಿರುವುದು ವಿಶೇಷವಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಇನ್ನಷ್ಟು ಉನ್ನತೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಪತ್ರಿಕೆ ಸಂಪಾದಕ ಶರಣಪ್ಪ ಕುಂಬಾರ ಮಾತನಾಡಿ, ಕೊರೋನಾ ಎರಡನೇ ಅಲೆಯ ಸುಮಾರಿಗೆ ಆರಂಭವಾದ ಪತ್ರಿಕೆ ಅತಿ ಶೀಘ್ರದಲ್ಲಿ ಸುದ್ದಿ ತಲುಪಿಸುವ ಮೂಲಕ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು. ಅತಿ ಬೇಗನೆ ಓದುಗ ದೊರೆಗಳಿಗೆ ವಿಭಿನ್ನ ಸುದ್ದಿಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಇನ್ನೂ ನಿರೀಕ್ಷೆಯಂತೆ ಆಗಿಲ್ಲ. ಪತ್ರಿಕೆ ಇನ್ನೂ ಕನ್ನಡ ನಾಡಿನ ಜನರ ದ್ವನಿಯಾಗಬೇಕಾಗಿದೆ ಎಂಬುದು ನಮ್ಮ ಪತ್ರಿಕಾ ತಂಡದ ಆಶಯವಾಗಿದೆ ಎಂದ ಅವರು ಪತ್ರಿಕೆ ಬೆಳವಣಿಗೆಗೆ ಕಾರಣರಾದವರನ್ನು ಸ್ಮರಿಸಿಕೊಂಡು, ಅಭಿನಂದಿಸಿದರು.