ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ನಾಲ್ಕು ಜನ ರಾಜ್ಯಸಭಾ ಸದಸ್ಯರ ಆಯ್ಕೆಗಾಗಿ ಜರುಗಿದ ಚುನಾವಣೆಯಿಂದ ಮುಂಬರುವ 2023 ರ ವಿಧಾನಸಭೆ ಚುನಾವಣೆಯ ಸ್ಪಷ್ಟವಾದ ರಾಜಕೀಯ ದಿಕ್ಸೂಚಿ ಹೊರಬಿದ್ದಂತಾಗಿದೆ..!?
ಬಿಜೆಪಿ, ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ರಾಜ್ಯಸಭೆಗೆ ನಾಲ್ಕನೇ ಅಭ್ಯರ್ಥಿ ಆಯ್ಕೆಗಾಗಿ ಮೂರು ಪಕ್ಷಗಳು ಸ್ವಪ್ರತಿಷ್ಠೆಗಾಗಿಯೇ ತಾಳಿದ ಸ್ಪಷ್ಟವಾದ ನಿಲುವುಗಳು ರಾಜ್ಯದಲ್ಲಿ ಮುಂಬರುವ ಚುನಾವಣೆಗಳಲ್ಲಿ ‘ತ್ರಿಕೋನ ಸ್ಪರ್ಧೆ’ ಖಚಿತವಾದಂತಾಗಿದೆ. ಯಾವುದೇ ತರಹದ ಚುನಾವಣೆ ಮುನ್ನ ಹಾಗೂ ಚುನಾವಣೊತ್ತರ ಹೊಂದಾಣಿಕೆ ಮಾತೆ ಇಲ್ಲದಂತಾಗಿದೆ. ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಬಿಜೆಪಿ ‘ಬಿ ಟೀಮ್’ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯನವರ ಘೋರವಾದ ಆರೋಪಕ್ಕೆ ಮೂಗುದಾರ ಹಾಕಿದಂತಾಗಿದೆ. ಮತಗಳ ಸಂಖ್ಯಾ ಬಲದಲ್ಲಿ ನಾಲ್ಕನೇ ಅಭ್ಯರ್ಥಿಗೆ ತಮ್ಮ ಬಳಿ ಸ್ಪಷ್ಟ ಬಹುಮತ ಇಲ್ಲದಿದ್ದರೂ ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಉಮೇದುವಾರಿಕೆ ಬಯಸಿ ಮನ್ಸೂರು ಅಲಿಖಾನ್ ಹಾಗೂ ಕುಪೇಂದ್ರ ರಡ್ಡಿ ಅವರನ್ನು ಖಣದಲ್ಲಿ ಉಳಿಸಿಕೊಂಡು, ಜಾತ್ಯಾತೀತ ಪಕ್ಷಗಳ ಪುಟ್ಟಿಗೆ ಬೀಳ ಬೇಕಾಗಿದ್ದ ಒಂದು ರಾಜ್ಯಸಭೆ ಸ್ಥಾನವನ್ನು ಅನಾಯಾಸವಾಗಿ ಕೋಮುವಾದಿ ಪಕ್ಷದ ಪಾಲಿಗೆ ಕಾರಣವಾಗಿದ್ದನ್ನು ಗಮನಿಸಿದರೇ.. ರಾಜ್ಯದಲ್ಲಿ ಜಾತ್ಯಾತೀತ ನಿಲುವನ್ನು ತಾಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಾಕಷ್ಟು ಕಂದಕ ನಿರ್ಮಾಣವಾಗಿರುವ ಸ್ಪಷ್ಟ ಸಂದೇಶ ದೇಶಕ್ಕೆ ರವಾನೆಯಾಗಿದೆ. ಜಾತ್ಯಾತೀತ ರಾಜಕಾರಣದಲ್ಲಿ ಬಹಳಷ್ಟು ನಂಬಿಕೆಯಿಟ್ಟ ಎರಡು ಪಕ್ಷಗಳಲ್ಲಿನ ಹೊಂದಾಣಿಕೆಯಿಲ್ಲದ ಲಾಭವನ್ನು ಬಿಜೆಪಿ ಪಡೆದುಕೊಳ್ಳುವ ಮೂಲಕ ಮೂರನೇ ಅಭ್ಯರ್ಥಿ ‘ಲೇಯರ್ ಸಿಂಗ್’ ಅವರಿಗೆ ಪ್ರಥಮ ಪ್ರಾಶಸ್ತ್ಯದ 32 ಮತಗಳ + ಎರಡನೇ ಪ್ರಾಶಸ್ತ್ಯದ 90 ಮತಗಳಿಂದ ಗೆಲವಿನ ನಗೆ ಬೀರಲು ಕಾರಣವಾಗಿತು. ಕೇವಲ ರಾಜ್ಯಸಭೆ ಚುನಾವಣೆ ಅಷ್ಟೇ ಅಲ್ಲದೇ, ಇಲ್ಲಿಯವರೆಗೂ ರಾಜ್ಯದಲ್ಲಿ ನಡೆದು ಹೋಗಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದ್ದಾದರೇ.. ರಾಜ್ಯದಲ್ಲಿ ಮಾತ್ರ ಯಾವುದೇ ತರಹದ ಒಳ ಒಪ್ಪಂದ, ಡಬಲ್ ಸ್ಟ್ಯಾಂಡ್ ಮತ್ತು ಅನುಕೂಲ ಸಿಂಧು ರಾಜಕಾರಣಕ್ಕೆ ತೆರೆ ಎಳೆದಂತಾಗಿದೆ. ಅಲ್ಲದೆ, ಹಣದ ಪ್ರಭಾವ ಕೂಡಾ ಈ ರಾಜ್ಯಸಭೆ ಚುನಾವಣೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿ ನಡೆಯದಿರುವುದು ಸ್ಪಷ್ಟವಾಗಿದೆ. ಇದರಿಂದ ರಾಜ್ಯದಲ್ಲಿ ಮುಂಬರುವ ಬಿಬಿಎಂಪಿ, ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಮೂರು ಪಕ್ಷಗಳಲ್ಲಿಯೂ ಸ್ಪಷ್ಟವಾದ ತ್ರಿಕೋನ ಸ್ಪರ್ಧೆಯ ಸಂದೇಶ ರಾಜ್ಯದ ಜನತೆಗೆ ರವಾನಿಯಾಗಿದೆ.
ರಾಜ್ಯ ಸಭೆಗೆ ಆಯ್ಕೆ : ಬಿಜೆಪಿಯಿಂದ ನಿರ್ಮಲಾ ಸೀತಾರಾಮ್ (46 ಮತಗಳಿಂದ) ಚಿತ್ರ ನಟ ಜಗ್ಗೇಶ್ (44 ಪ್ರಥಮ + ಎರಡನೇ ಪ್ರಾಶಸ್ತ್ಯದ 32 ಮತಗಳಿಂದ) ಹಾಗೂ ಲೇಯರ್ ಸಿಂಗ್ 32 ಪ್ರಥಮ ಪ್ರಾಶಸ್ತ್ಯದ ಮತಗಳು ಎರಡನೇ ಪ್ರಾಶಸ್ತ್ಯದ 90 ಮತಗಳಿಂದ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಜಯರಾಮ್ ರಮೇಶ 46 ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ..!!
ಸೋಲು : ಕೊನೆ ಕ್ಷಣದವರೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೊಂದಾಣಿಕೆಗೆ ಮುಂದಾಗದ ಹಿನ್ನಲೆಯಲ್ಲಿ ಜೆಡಿಎಸ್ ನ ಕುಪೇಂದ್ರ ರಡ್ಡಿ ಪ್ರಥಮ ಪ್ರಾಶಸ್ತ್ಯದ 30 ಮತಗಳು ಹಾಗೂ ಕಾಂಗ್ರೆಸ್ ನ ಮನ್ಸೂರ್ ಅಲಿಖಾನ್ 25 ಪ್ರಥಮ ಪ್ರಾಶಸ್ತ್ಯದ ಮತಗಳು ಹಾಗೂ ಎರಡನೇ ಪ್ರಾಶಸ್ತ್ಯದ 46 ಮತಗಳನ್ನು ಪಡೆದು ಸೋಲು ಕಾಣಬೇಕಾಗಿತು. ಈ ಎರಡು ಪಕ್ಷಗಳ ಲಾಭವನ್ನು ಬಿಜೆಪಿಯ ಮೂರನೇ ಅಭ್ಯರ್ಥಿ ಲೇಯರ್ ಸಿಂಗ್ ಪಡೆದುಕೊಂಡಂತಾಗಿತು.
ಅಡ್ಡ ಮತದಾನ : ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಗೆ ವೋಟ್ ನೀಡಿದ್ದಾರೆ.