ಕೃಷಿ ಪ್ರಿಯ ನ್ಯೂಸ್ |
ಸಂಗಮೇಶ ಮುಶಿಗೇರಿ
ಖತರ್ನಾಕ್ ಕಳ್ಳರು ಅಂಗಡಿಗಳ ಮೇಲ್ಚಾವಣಿಯ ತಗಡು ಕತ್ತರಿಸಿ ಸರಣಿ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.!
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ಕೃಷ್ಣಾ ಹೋಟೆಲ್ ಪಕ್ಕದ ಸಾಲು ಅಂಗಡಿಗಳಲ್ಲಿ ಈ ಘಟನೆ ನಡೆದಿದೆ.
ಸಿದ್ರಾಮಯ್ಯ ಎಂಬುವರಿಗೆ ಸೇರಿದ ಕಬ್ಬಿಣದ ಅಂಗಡಿ, ಮಲ್ಲಿಕಾರ್ಜುನ ಕೊಳೂರು ಎಂಬುವರಿಗೆ ಸೇರಿದ ಗೊಬ್ಬರದ ಅಂಗಡಿ, ಮುಸ್ತಫಾ ಅನಾಸೂರು ಎಂಬುವರಿಗೆ ಸೇರಿದ ಸ್ವೀಟ್ಸ್ ಪಾನ್ ಮಸಾಲಾ ಸ್ಟೋರ್ಸ್, ಮತ್ತೊಂದು ವೀರಭದ್ರಯ್ಯ ಎಂಬುವರಿಗೆ ಸೇರಿದ ಎಲೆಕ್ಟ್ರಿಕಲ್ ಅಂಗಡಿಗಳ ಮೇಲ್ಚಾವಣಿಯ ತಗಡುಗಳನ್ನು ಕಳ್ಳರು ಕತ್ತರಿಸಿದ್ದಾರೆ.
ಹಗ್ಗದ ಸಹಾಯದಿಂದ ಮೇಲ್ಚಾವಣಿ ಮೂಲಕ ಅಂಗಡಿಯೊಳಗಿಳಿದ ಕಳ್ಳರು ಮುಸ್ತಫಾ ಅನಾಸೂರು ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಸುಮಾರು 30 ಸಾವಿರ ರೂ. ಮೌಲ್ಯದ ಸಿಗರೇಟ್, ಗುಟುಕಾ ಸೇರಿದಂತೆ ಇತರೆ ಪಾಕೀಟ್’ಗಳ ಹೊತ್ತೊಯ್ದಿದ್ದಾರೆ. ಗೊಬ್ಬರದ ಅಂಗಡಿಯಲ್ಲಿ ಐದಾರು ಸಾವಿರ ರೂಪಾಯಿ ಚಿಲ್ಲರೆ ಹಣ ಕದ್ದಿದ್ದಾರೆ. ಕಬ್ಬಿಣ ಅಂಗಡಿಯಲ್ಲಿ ಕಳ್ಳರ ಕೈಗೇನು ಸಿಗದಿರುವದರಿಂದ ಹಾಗೇ ಬಿಟ್ಟಿದ್ದಾರೆ. ಎಲೆಕ್ಟ್ರಿಕಲ್ ಅಂಗಡಿಯ ಮೇಲ್ಚಾವಣಿ ತಗಡು ಕತ್ತರಿಸಿದ್ದು, ಅಂಗಡಿಯೊಳಗೆ ಮೇಲ್ಭಾಗದಲ್ಲಿ ಪ್ಲೈವುಡ್ ಅಳವಡಿಸಿದ್ದರಿಂದ ಒಳನುಗ್ಗಲು ಅವಕಾಶ ಸಿಗದೇ ಹಾಗೇ ಬಿಟ್ಟಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತಿದ್ದು, ಜನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ದುರಸ್ಥಿ ಪಡಿಸಿದರೆ. ಪ್ರಕರಣಗಳ ಪತ್ತೆಗೆ ಹಾಗೂ ಕಳ್ಳತನ ತಡೆಗೆ ಸಹಾಯವಾಗುತ್ತದೆ ಸಂಬಂಧಿಸಿದ ಪುರಸಭೆ ಹಾಗೂ ಪೊಲೀಸ್ ಇಲಾಖೆ ದುರಸ್ತಿಗೆ ಮುಂದಾಗಬೇಕಿದೆ.!