ಅಧಿಕಾರಿಗಳಿಗೆ ಹಣದ ಬೇಡಿಕೆ ಕೃತ್ಯ: ಲೋಕಾಯುಕ್ತರಿಂದ ಸ್ಪಷ್ಟನೆ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕೆಲವು ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಯಾರೋ ಅನಾಮದೇಯ ವ್ಯಕ್ತಿಗಳು ಕರ್ನಾಟಕ ಲೋಕಾಯುಕ್ತ, ಕೊಪ್ಪಳದ ಅಧಿಕಾರಿಯ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಅಧಿಕಾರಿಗಳಿಗೆ ಬೆದರಿಸಿ ಹಣದ ಬೇಡಿಕೆ ಇಟ್ಟ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಇರುತ್ತದೆ. ಇದು ಯಾರೋ ಅನಾಮದೇಯ ವ್ಯಕ್ತಿಗಳು ಮಾಡಿದ ಕೃತ್ಯವಾಗಿರುತ್ತದೆ ಎಂದು ಕರ್ನಾಟಕ ಲೋಕಾಯುಕ್ತ, ಕೊಪ್ಪಳ ಆರಕ್ಷಕ ಉಪಾಧೀಕ್ಷಕರಾದ ಸಲೀಂ ಪಾಷ ಅವರು ತಿಳಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ, ಕೊಪ್ಪಳ ಘಟಕದಿಂದ ಯಾವುದೇ ಅಧಿಕಾರಿಗಾಗಲಿ ಅಥವಾ ಸಿಬ್ಬಂದಿಯವರಿಗಾಗಲಿ ತಮಗೆ ಕರೆ ಮಾಡಿ ಯಾವುದೇ ರೀತಿಯ ಬೆದರಿಕೆಯಾಗಲಿ ಅಥವಾ ಹಣದ ಬೇಡಿಕೆಯನ್ನು ಇಡುವುದಿಲ್ಲ. ಕೊಪ್ಪಳ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಯಾರಾದರೂ ಕರ್ನಾಟಕ ಲೋಕಾಯುಕ್ತ, ಕೊಪ್ಪಳ ಘಟಕದ ಅಧಿಕಾರಿ, ಸಿಬ್ಬಂದಿಯವರು ಅಂತಾ ಕರೆ ಮಾಡಿ ಹಣ ಅಥವಾ ಇನ್ನಿತರೇ ವಸ್ತುಗಳಿಗೆ ಬೇಡಿಕೆ ಇಟ್ಟಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ಕರ್ನಾಟಕ ಲೋಕಾಯುಕ್ತ, ಕೊಪ್ಪಳ ಪೊಲೀಸ್ ಉಪಾಧೀಕ್ಷಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.