ಸಾರ್ವಜನಿಕರ ದೂರಿಗೆ ಪುರಸಭೆ ಜೆಇ ಕ್ರಮ : ವೈಜ್ಞಾನಿಕ ಪೈಪ್ಲೈನ್ ಕಾಮಗಾರಿಗೆ ಮುಂದಾದ ಗುತ್ತಿಗೆದಾರರು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ತಡೆಹಿಡಿಯಲಾಗಿದ್ದ ಅವೈಜ್ಞಾನಿಕ ಕುಡಿಯುವ ನೀರಿನ ಮುಖ್ಯ ಪೈಪ್ಲೈನ್ ಕಾಮಗಾರಿಯನ್ನು ಪುರಸಭೆ ಜೆಇ ಕ್ರಮದ ಮೇರೆಗೆ ಗುತ್ತಿಗೆದಾರರು ಕಾಮಗಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲು ಮುಂದಾಗಿದ್ದಾರೆ.

ಜಿಲ್ಲೆಯ ಕುಷ್ಟಗಿ ಪಟ್ಟಣದ ಮಾರುತಿ ವೃತ್ತದಿಂದ ಕನಕದಾಸ ವೃತ್ತದ ದ್ವಾರಕಾ ಹೋಟೆಲ್ ವರೆಗೆ ಪುರಸಭೆಯ 15ನೇ ಹಣಕಾಸು ಯೋಜನೆಯಡಿ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ 6 ಮತ್ತು 7ನೇ ವಾರ್ಡಗಳಿಗೆ ಸಂಬಂಧಿಸಿದ ಕುಡಿಯುವ ನೀರು ಪೂರೈಸುವ ಮುಖ್ಯ ಪೈಪ್ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ ಎಂದು ಪುರಸಭೆ ಸದಸ್ಯ ಸೇರಿದಂತೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು “ಕೃಷಿಪ್ರಿಯ” ವೆಬ್ ಪತ್ರಿಕೆ ಸಚಿತ್ರ ವರದಿ ಮಾಡಿತ್ತು.

ವರದಿಗೆ ಎಚ್ಚೆತ್ತ ಪುರಸಭೆ ಕಿರಿಯ ಇಂಜಿನಿಯರ್ ಶಿಲ್ಪಾ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಾರುತಿ ವೃತ್ತದಿಂದ ಕನಕದಾಸ ವೃತ್ತದ ದ್ವಾರಕಾ ಹೋಟೇಲ್ ವರೆಗೂ 30 ಅಡಿ ಅಂತರಕ್ಕೊಮ್ಮೆ ಪೈಪ್ಲೈನ್ ಅಳವಡಿಕೆಯ ಆಳವನ್ನು ಪರಿಶೀಲನೆ ನಡೆಸುವವರೆಗೆ ಕಾಮಗಾರಿ ತಡೆಹಿದಿದ್ದರು.
ಭಾನುವಾರ ದಿನ ಕಾಮಗಾರಿ ಕೈಗೊಂಡ ಗುತ್ತಿಗೆದಾರರು ಮಾರುತಿ ವೃತ್ತದಿಂದ ಟಿಎಪಿಸಿಎಂಎಸ್ ಸೊಸೈಟಿ ಮುಂಭಾಗದ ವರೆಗೆ ಮಾತ್ರ ತೆಗ್ಗು ಅಗೆದು ವೈಜ್ಞಾನಿಕವಾಗಿ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ.

ಆದರೆ, ಅಬ್ದುಲ್ ಕಲಾಂ ವೃತ್ತದಿಂದ ಕನಕದಾಸ ವೃತ್ತ ದ್ವಾರಕಾ ಹೋಟೇಲ್ ವರೆಗಿನ ಪೈಪ್ಲೈನ್ ವೈಜ್ಞಾನಿಕವಾಗಿ ಅಳವಡಿಸಿಲ್ಲ. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಗಮನಿಸಿ ಪೈಪ್ಲೈನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರು ವ್ಯಕ್ತಪಡಿಸಿದ್ದಾರೆ.

ವರದಿ ಆಧರಿಸಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಮಾರುತಿ ವೃತ್ತದಿಂದ ಕನಕದಾಸ ಸರ್ಕಲ್ ದ್ವಾರಕಾ ಹೋಟೆಲ್ ವರೆಗಿನ ಕುಡಿಯುವ ನೀರಿನ ಮುಖ್ಯ ಪೈಪ್ಲೈನ್ ಅಳವಡಿಕೆ ಕಾಮಗಾರಿ ಸರಿಪಡಿಸಲಾಗಿದೆ.

– ಶಿಲ್ಪಾ ಜಿ.,
ಜೆಇ ಪುರಸಭೆ ಕುಷ್ಟಗಿ.